ಉಳ್ಳಾಲ: ನಾಪತ್ತೆಯಾಗಿದ್ದ 25 ವರ್ಷದ ಯುವಕನೋರ್ವನ ಮೃತದೇಹ ಉಚ್ಚಿಲ ರೈಲ್ವೆ ಗೇಟ್ ಬಳಿಯ ರೈಲ್ವೆ ಹಳಿಗಳ ಮೇಲೆ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಮೃತ ಯುವಕನನ್ನು ಕೋಟೆಕಾರ್ನ ಬೀರಿ ನಿವಾಸಿ ಮೋಹನ್ದಾಸ್ ಅಮೀನ್ ಅವರ ಪುತ್ರ ತೇಜಸ್ (25) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ತೇಜಸ್ ಜುಲೈ 2ರ ರಾತ್ರಿ ತನ್ನ ಕೋಣೆಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ತೇಜಸ್ ನಾಪತ್ತೆಯಾದ ಬಳಿಕ ಅವರ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಇಂದು ಬೆಳಿಗ್ಗೆ, ತೇಜಸ್ ಮೃತದೇಹವು ಉಚ್ಚಿಲ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆ ಶಂಕೆಯ ಮೇಲೆ ತನಿಖೆ ನಡೆಸುತ್ತಿದ್ದಾರೆ.