ಕಾರವಾರ: ಕಾರವಾರದ ಪಿಕಳೆ ಆಸ್ಪತ್ರೆ ಬಳಿ ಭಾರೀ ಮಳೆಯಿಂದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ಅತ್ತೆ ಮೃತಪಟ್ಟಿದ್ದು, 8 ತಿಂಗಳ ಗರ್ಭಿಣಿ ಮತ್ತು ಚಾಲಕ ಪಾರಾಗಿರುವ ಘಟನೆ ನಡೆದಿದೆ.
ಮೃತ ಮಹಿಳೆ ಲಕ್ಷ್ಮೀ ಪಾಗಿ ಎಂದು ತಿಳಿದು ಬಂದಿದೆ.
ಗರ್ಭಿಣಿ ಸೊಸೆ ಸುನಿತಾಗೆ ಜ್ವರ ಹಿನ್ನೆಲೆ ಅತ್ತೆ ಲಕ್ಷ್ಮೀ ಆಸ್ಪತ್ರೆಗೆ ಕರೆತಂದಿದ್ದಾರೆ. ಪಿಕಳೆ ಆಸ್ಪತ್ರೆ ಎದುರು ಮರದ ಕೆಳಗೆ ಚಾಲಕ ಕಾರು ನಿಲ್ಲಿಸಿದ್ದ. ಭಾರೀ ಮಳೆ ಹಿನ್ನಲೆ ಮರವೊಂದು ಧರೆಗುರುಳಿದೆ. ಮರ ಬೀಳುವುದನ್ನು ಗಮನಿಸಿದ ಸುನಿತಾ ಮತ್ತು ಚಾಲಕ ತಕ್ಷಣ ಕೆಳಗಿಳಿದಿದ್ದಾರೆ. ಆದರೆ ಡೋರ್ ತೆಗೆಯುವುದು ತಡವಾದರಿಂದ ಲಕ್ಷ್ಮೀ ಕಾರಿನ ಒಳಗಡೆ ಸಿಲುಕಿದ್ದಾರೆ.
ಲಕ್ಷ್ಮೀ ರಕ್ಷಣೆಗಾಗಿ ಕೂಡಲೇ ಸ್ಥಳೀಯರು ಮತ್ತು ನಗರಸಭೆ ಸಿಬ್ಬಂದಿ ಮುಂದಾಗಿ, ಹರಸಾಹಸ ಪಟ್ಟು ಲಕ್ಷ್ಮೀ ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯಿಂದ ಆಘಾತಕ್ಕೀಡಾಗಿರುವ 8 ತಿಂಗಳ ಗರ್ಭಿಣಿ ಸುನಿತಾ ಪಾಗಿಯನ್ನು ಪಿಕಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಡಿಸಿ ಮತ್ತು ನಗರಸಭೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.