ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದ ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್ ಕುಮಾರ್ ಗೆ ಹನಿಟ್ರ್ಯಾಪ್ ಮಾಡಿ ಪರಾರಿಯಾಗಿದ್ದ ಜೋಡಿಯನ್ನು ಬಂಧಿಸುವಲ್ಲಿ ಬೈಲಕುಪ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹನಿಟ್ರ್ಯಾಪ್ ಮಾಡಿ ತಲೆಮರೆಸಿಕೊಂಡಿದ್ದ ಕವನ ಹಾಗೂ ಸೈಫ್ ಎಂಬವರು ಕೇರಳದ ಕಣ್ಣೂರಿನ ಲಾಡ್ಜ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದಕ್ಕೂ ಮುನ್ನ ಇದೇ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಹುಣಸೂರು ಠಾಣೆ ಕಾನ್ಸ್ ಟೇಬಲ್ ಶಿವಣ್ಣನನ್ನು ಪೊಲೀಸರು ಬಂಧಿಸಿದ್ದರು.
ಕಳೆದ ಒಂದು ತಿಂಗಳ ಹಿಂದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್ ಕುಮಾರ್ ನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಕವನ ಹಾಗೂ ಸೈಫ್ ಜೋಡಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿತ್ತು. ಈ ಸಂಬಂಧ ದಿನೇಶ್ ಕುಮಾರ್ ಬೈಲಕುಪ್ಪೆ ಠಾಣೆಗೆ ದೂರು ನೋಡಿದ್ದರು. ಬಳಿಕ ಕಾರ್ಯಚರಣೆ ನಡೆಸಿದ ಪೊಲೀಸರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಪೇದೆ ಶಿವಣ್ಣ, ಆನಂದ್ ಹಾಗೂ ಮೂರ್ತಿಯನ್ನು ಬಂಧಿಸಿದ್ದರು. ಆದರೆ, ಹನಿಟ್ರ್ಯಾಪ್ ನ ಕಿಂಗ್ ಪಿನ್ ಗಳಾಗಿದ್ದ ಕವನ, ಸೈಫ್ ತಲೆಮರೆಸಿಕೊಂಡಿದ್ದರು.
ತಲೆಮರೆಸಿಕೊಂಡಿದ್ದ ಕವನ ಮತ್ತು ಸೈಫ್ ನನ್ನು ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಬೈಲಕುಪ್ಪೆ ಪಿಎಸ್ಐ ರವಿಕುಮಾರ್, ಸಿಬ್ಬಂದಿಗಳಾದ ವಿಜಯ ಪವರ್, ಮುದ್ದುರಾಜ್, ಮಹಿಳಾ ಪೊಲೀಸ್ ಪೇದೆ ಅಶ್ವಿತಾ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಬೈಲಕುಪ್ಪೆ ವ್ಯಾಪ್ತಿಯಲ್ಲಿ ಹನಿ ಟ್ರ್ಯಾಪ್ ಮಾಡಿದ ಸ್ಥಳಗಳಿಗೆ ಆರೋಪಿಗಳನ್ನು ಬೈಲಕುಪ್ಪೆ ಪೊಲೀಸರು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.