ಮಂಗಳೂರು: ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂಬ ಆಘಾತಕಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಅದೇ ಚಿನ್ನವನ್ನು ಮತ್ತೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ ಪಡೆದಿದ್ದಾರೆ.ಮಂಗಳೂರಿನ ಶಕ್ತಿನಗರದ ಪದುವಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಘಟನೆ ನಡೆದಿದೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿ ಸಹಕಾರಿ ಸಂಘದ ವ್ಯವಸ್ಥಾಪಕ ಪ್ರೀತೇಶ್ ಎಂದು ಗುರುತಿಸಲಾಗಿದೆ. ವಂಚನೆ ಚಟುವಟಿಕೆಯಲ್ಲಿ ಸಹಾಯ ಮಾಡಿದ ಶೇಖ್ ಮುಹಮ್ಮದ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೊಸೈಟಿಯ ಲಾಕರ್ನಿಂದ ಅಕ್ರಮವಾಗಿ ಅಡವಿಟ್ಟ ಚಿನ್ನವನ್ನು ಹೊರತೆಗೆದಿದ್ದಾನೆ. ನಂತರ ತನ್ನ ಸಹಚರರ ಮೂಲಕ ಅದೇ ಆಭರಣಗಳನ್ನು ಶಕ್ತಿನಗರದ ಮತ್ತೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು 3.25 ಕೋಟಿ ರೂ. ಸಾಲ ಪಡೆದಿದ್ದಾನೆ ಎಂದು ಹೇಳಲಾಗಿದೆ.
ವಂಚನೆಯ ಸುದ್ದಿ ತಿಳಿದು ಪ್ರೀತೇಶ್ ಬೆಂಗಳೂರಿಗೆ ಪರಾರಿಯಾಗಿ ನಂತರ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಬಳಿಕ ಪೊಲೀಸರು ಬಂಧನಕ್ಕಾಗಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಇದೀಗ ಪ್ರಮುಖ ಆರೋಪಿ ಪ್ರೀತೇಶ್ ವಿದೇಶದಿಂದ ಬಂದು ಮಂಗಳೂರಿನ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.
ನಿಜವಾದ ಆಭರಣಗಳನ್ನು ಬಳಸಿ 3.5 ಕೋಟಿ ರೂ. ಸಾಲ ಪಡೆದ ನಂತರ, ಪ್ರೀತೇಶ್ ಮೂಲ ಗ್ರಾಹಕರನ್ನು ವಂಚಿಸಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಚಿನ್ನವನ್ನು ಒಂದೇ ವಿನ್ಯಾಸದ ನಕಲಿ ಆಭರಣಗಳಿಂದ ಬದಲಾಯಿಸುವ ಮೂಲಕ ಈ ಯೋಜನೆ ರೂಪಿಸಿದ್ದ. ಈ ಉದ್ದೇಶಕ್ಕಾಗಿ ಸುಮಾರು 3.5 ಕೆಜಿ ರೋಲ್ಡ್ ಗೋಲ್ಡ್ ಆಭರಣಗಳನ್ನು ತಯಾರಿಸಲಾಗಿತ್ತು. ಈ ನಕಲಿ ವಸ್ತುಗಳನ್ನು ಶೇಖ್ ಮುಹಮ್ಮದ್ ಅವರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನಾ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.