ಉಡುಪಿ: ಕೊಳಲಗಿರಿ ನಿವಾಸಿ ಹುಡುಗಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಈಗ ಬೇರೆ ಮಹಿಳೆಯೊಂದಿಗೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಆರೋಪಿಯನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ ಲಕ್ಷ್ಮೀನಗರದ ನಿವಾಸಿ ಆರೋಪಿ ಸಂಜಯ್ ಕರ್ಕೇರ (28) ಎಂದು ತಿಳಿದು ಬಂದಿದೆ.
ಸಂತ್ರಸ್ತೆ ಹಾಗೂ ಆರೋಪಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, 2024ರ ಜು.11ರಂದು ಆರೋಪಿಯೊಂದಿಗೆ ಆಕೆ ಕಳಸಕ್ಕೆ ತೆರಳಿದ್ದು, ಚಾರಣ ಮುಗಿದ ಅನಂತರ ಆಕೆಗೆ ಜ್ಯೂಸ್ ನೀಡಿ ಅರೆಪ್ರಜ್ಞೆ ಮಾಡಿ ದೈಹಿಕ ಸಂಪರ್ಕ ನಡೆಸಿದ್ದ.
ಅನಂತರ ಮದುವೆಯಾಗುವುದಾಗಿ ನಂಬಿಸಿ ಶೃಂಗೇರಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸಿಂಧೂರವಿಟ್ಟು ಹೂವಿನ ಮಾಲೆ ಹಾಕಿದ್ದ. ಮುಂದೆ ಮನೆಯವರನ್ನು ಒಪ್ಪಿಸಿ ಮದುವೆಯಾಗುವ ಭರವಸೆ ನೀಡಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.