ಕಾರವಾರ: ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಹುಡುಗಿಯರನ್ನು ದುರ್ಬಳಕೆ ಮಾಡುವ ಜಾಲದ ಮಾಹಿತಿ ಬಿಚ್ಚಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಸಂತೋಷ್ ಗಣಪತಿ ನಾಯ್ಕ (26) ಎಂದು ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತೌಡತ್ತಿ ನಿವಾಸಿಯಾಗಿರುವ ಸಂತೋಷ್ ಸಾವಿಗೆ ಶರಣಾಗುವ ಮುನ್ನ ಹುಡುಗಿಯರನ್ನು ದುರ್ಬಳಕೆ ಮಾಡುವ ಜಾಲದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜಾಲದ ಬಗ್ಗೆ ಆಡಿಯೊ ಹಾಗೂ ಪೋಟೋ ಎಡಿಟ್ ಮಾಡಿದ ವೀಡಿಯೊ ಹಂಚಿಕೊಂಡಿದ್ದಾನೆ.
ಹುಡುಗಿಯರ ಮಿಸ್ಯೂಸ್ ಮಾಡೋನ್ನು ದುರ್ಬಳಕೆ ಮಾಡುವ ಮನೋಜ್ ಹಾಗೂ ಇತರೆ 4 ಜನರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿಕೊಂಡ ಸಂತೋಷ್, ಸಿದ್ಧಾಪುರದ ತಾಲೂಕಿನ ಕಾನೆಹಳ್ಳಿ ಬಳಿ ದೂಪದಕಾನು ಅರಣ್ಯದಲ್ಲಿ ಅಕೇಶಿಯಾ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಸಂತೋಷ್ ಫೇಸ್ಬುಕ್ನಲ್ಲಿ ಯುವತಿಯ ಫೇಕ್ ಪ್ರೊಫೈಲ್ ಮಾಡಿ ಜಾಲವನ್ನು ತನ್ನ ಬಲೆಗೆ ಬೀಳಿಸಿದ್ದ. ಹುಡುಗಿಯಂತೆ ಮಾತನಾಡಿ, ಅವರಿಂದ ಮಾಹಿತಿ ಪಡೆದು ಒಂದಷ್ಟು ಹಣ ಕೂಡಾ ಪಡೆದಿದ್ದ. ಆದರೆ, ಫೇಕ್ ಪ್ರೊಫೈಲ್ ಹುಡುಗಿಯದ್ದಲ್ಲ ಸಂತೋಷನದ್ದು ಎಂದು ತಿಳಿದು ಆತನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಮನೆಗೆ ತೆರಳಿ ಗಲಾಟೆ ಮಾಡಿ ಆತನ ಟ್ಯಾಬ್ಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದಾರೆ.
ತಾನು ಪ್ರೀತಿಸಿದ ಯುವತಿ ಕೂಡಾ ಈ ಜಾಲಕ್ಕೆ ಬೆಂಬಲ ನೀಡುತ್ತಿರುವುದಾಗಿ ಆಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಜಾಲದ ಬಗ್ಗೆ ಆಡಿಯೊ ಹಾಗೂ ಪೋಟೋ ಎಡಿಟ್ ಮಾಡಿದ ವೀಡಿಯೊ ಸಹ ಹಂಚಿಕೊಂಡಿದ್ದಾನೆ. ಅಲ್ಲದೇ, ಸಿದ್ಧಾಪುರದ ಕಾಂಗ್ರೆಸ್ ನಾಯಕರ ಬಗ್ಗೆಯೂ ಆರೋಪ ಮಾಡಿದ್ದಾನೆ. ಆರೋಪಿಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲವಾಗಿ ನಿಂತಿರುವ ಬಗ್ಗೆ ಆಡಿಯೋದಲ್ಲಿ ಹೇಳಿದ್ದಾನೆ.
ತಾನು ಪ್ರೀತಿಸಿದ ಯುವತಿಯನ್ನು ಜಾಲದಿಂದ ರಕ್ಷಣೆ ಮಾಡಲು ಇಷ್ಟೆಲ್ಲಾ ಮಾಡಿದ್ದೆ. ಆದರೆ, ಕೊನೆಗೆ ಪ್ರೀತಿಸಿದ ಯುವತಿಯೇ ಜಾಲಕ್ಕೆ ಬೆಂಬಲವಾಗಿ ನಿಂತಿದ್ದಾಳೆ. ಇನ್ನು ನನಗೇನು ಬೇಡ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೊ ಮಾಡಿ ಬಳಿಕ ನೇಣು ಹಾಕಿಕೊಂಡಿದ್ದಾನೆ.
ಈ ಸಂಬಂಧ ಮೃತ ಸಂತೋಷ್ ತಂದೆ ಗಣಪತಿ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂತೋಷ್ ಸಿದ್ಧಾಪುರ ಅಪೇಕ್ಷಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಸಿದ್ಧಾಪುರ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇತರ 4 ಜನರು ಮನೆಗೆ ಬಂದು ಬೆದರಿಕೆ ಹಾಕಿದ್ದರು. ಹುಡುಗಿಯನ್ನು ಲವ್ ಮಾಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಬೇರೆಡೆ ಹೋಗಿ ಸಾಯಲು ದುಷ್ಪ್ರೇರಣೆ ನೀಡಿದ್ದರು. ಅಲ್ಲದೇ, ತನಗೂ ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದರು. ಇದರಿಂದ ಭಯಭೀತನಾಗಿದ್ದ ಸಂತೋಷ್ ಊಟ ಕೂಡಾ ಮಾಡುತ್ತಿರಲಿಲ್ಲ. ನಿನ್ನೆ ಮಧ್ಯಾಹ್ನ ಜಮೀನಿಗೆ ಹೋಗಿ ಬರುತ್ತೇನೆಂದು ಸಿದ್ಧಾಪುರದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.