ಭಟ್ಕಳ: ತಾಲೂಕಿನ ತೆರ್ನಮಕ್ಕಿ ಸಭಾತಿಯಲ್ಲಿ ಜೋಕಾಲಿಯಲ್ಲಿ ಆಟ ಆಡುತ್ತಿರುವಾಗ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಉಸಿರುಗಟ್ಟಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಮೃತ ಬಾಲಕಿ 7ನೇ ತರಗತಿಯ ವಿದ್ಯಾರ್ಥಿನಿ ಪ್ರಣೀತ ಜಗನ್ನಾಥ ನಾಯ್ಕ (13) ಎಂದು ತಿಳಿದು ಬಂದಿದೆ.
ಮಳೆಯ ಪ್ರಯುಕ್ತ ಗುರುವಾರ ಶಾಲೆಗೆ ರಜೆಯಿದ್ದ ಕಾರಣ ಬಾಲಕಿ ತನ್ನ ಸಹೋದರಿಯೊಂದಿಗೆ ಶಾಲಿನಿಂದ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಳು. ಈ ಸಂದರ್ಭ ಆಕಸ್ಮಿಕವಾಗಿ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದೆ. ಇದರಿಂದಾಗಿ ಬಾಲಕಿಗೆ ಉಸಿರುಗಟ್ಟಿದ್ದು, ಅದರಿಂದ ತಪ್ಪಿಸಿಕೊಳ್ಳಲಾಗದೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಘಟನಾ ಸಂದರ್ಭ ತಾಯಿಯು ಕೂಡಾ ಕೆಲಸಕ್ಕೆ ಹೋಗಿದ್ದರಿಂದ ಅಪಾಯದಿಂದ ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.