ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಗಸ್ತು ತಿರುಗುವ ವೇಳೆ ಕರಡಿಯೊಂದು ದಾಳಿ ನಡೆಸಿ, ಅರಣ್ಯ ಇಲಾಖೆಯ ಪಿಸಿಪಿ ಸಿಬ್ಬಂದಿಯನ್ನು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ಅರಣ್ಯ ವೀಕ್ಷಕ ಮಾದ (35) ಎಂದು ತಿಳಿದು ಬಂದಿದೆ.
ಕರಡಿ ದಾಳಿಗೆ ತುತ್ತಾದ ಅರಣ್ಯ ವೀಕ್ಷಕನ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಎಚ್.ಡಿ.ಕೋಟೆ ತಾಲೂಕಿನ ಸೋಗಹಳ್ಳಿ ಸಮೀಪದ ಎಂ.ಜಿ.ಹಳ್ಳಿ ಹಾಡಿಯ ನಿವಾಸಿ ಮಾದ ಅವರು ಎಂದಿನಂತೆ ಮಂಗಳವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ, ಮಾದನಕಡ ಕ್ಯಾಂಪ್ನಿಂದ 5 ಮಂದಿಯ ತಂಡದೊಂದಿಗೆ ಗಸ್ತು ತಿರುಗಲು ಕಾಡಿಗೆ ಹೋಗಿದ್ದರು. ಈ ಸಂದರ್ಭ ಗುಂಪಿನಲ್ಲಿ ಮುಂದೆ ಹೋಗುತ್ತಿದ್ದ ಮಾದ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದರಿಂದ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಒಂದು ಭಾಗದ ಕಣ್ಣು ಕಿತ್ತು ಬಂದಿದೆ. ಕೂಡಲೇ ಉಳಿದ ನಾಲ್ವರು ಕಿರುಚಾಡಿದ್ದರಿಂದ ಕರಡಿ ಮಾದ ಅವರನ್ನು ಬಿಟ್ಟು ಓಡಿ ಹೋಗಿದೆ ಎಂದು ತಿಳಿದು ಬಂದಿದೆ.
ಸಹೋದ್ಯೋಗಿಗಳು ಕೂಡಲೇ ಅರಣ್ಯ ಇಲಾಖೆಯ ವಾಹನದಲ್ಲಿ ಮಾದ ಅವರನ್ನು ಕಾಡಿನಿಂದ ಹೊರಗೆ ತಂದರು. ನಂತರ ಖಾಸಗಿ ಆಂಬುಲೆನ್ಸ್ ನಲ್ಲಿ ಮೈಸೂರಿಗೆ ಸಾಗಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.