ತಿರುವನಂತಪುರಂ: ಪತಿ ಸೇರಿದಂತೆ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಕೇರಳ ಮೂಲದ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಂದು ಬಳಿಕ ತಾನೂ ಆತ್ಮಹ*ತ್ಯೆಗೆ ಶರಣಾದ ಘಟನೆ ಶಾರ್ಜಾದಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ಮೃತರನ್ನು ಕೇರಳದ ಕೊಲ್ಲಂ ನಿವಾಸಿಯಾಗಿರುವ ವಿಪಂಜಿಕಾ ಮಣಿ(32) ಮತ್ತು ಆಕೆಯ ಒಂದೂವರೆ ವರ್ಷದ ಹೆಣ್ಣು ಮಗು ವೈಭವಿ ಎಂದು ಗುರುತಿಸಲಾಗಿದೆ.
ವಿಪಂಜಿಕಾ ಮಣಿ ಮತ್ತು ನಿಧೀಶ್ ದಂಪತಿ ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ ನೆಲೆಸಿದ್ದು ಇವರಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದ್ದು ಜುಲೈ 8 ಶಾರ್ಜಾದ ಅಲ್ ನಹ್ಲಾದಲ್ಲಿ ತಮ್ಮ ಮನೆಯಲ್ಲಿ ವಿಪಂಜಿಕಾ ಮಣಿ ಹಾಗೂ ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ವಿಪಂಜಿಕಾ ಅವರ ತಾಯಿ ಪತಿ ಹಾಗೂ ಮಾವನ ವಿರುದ್ಧ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ಆತ್ಮಹತ್ಯೆಗೂ ಮೊದಲು ವಿಪಂಜಿಕಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಪತಿ, ಹಾಗೂ ಮಾವ ನೀಡುತ್ತಿದ್ದ ಕಿರುಕುಳದ ಕುರಿತು ಬರೆದುಕೊಂಡಿದ್ದಾರೆ. ಅಲ್ಲದೇ ಮಾವ ತನ್ನ ತನ್ನ ಜೊತೆ ಕೆಟ್ಟದಾಗಿ ವರ್ತಿಸಿರುವುದು. ಈ ವಿಚಾರವನ್ನು ಪತಿ ನಿಧೀಶ್ ಬಳಿ ಹೇಳಿಕೊಂಡರು ಪತಿ ಕ್ಯಾರೇ ಅನ್ನಲಿಲ್ಲ ಅಲ್ಲದೆ ತಂದೆಯ ಪರವಾಗಿ ವಾದ ಮಾಡಿದ್ದರು. ಜೊತೆಗೆ ಪತಿ ದಿನಂಪ್ರತಿ ನನ್ನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇನ್ನು ನನಗೆ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಿಲ್ಲ ಇವರನ್ನು ಬಿಡಬೇಡಿ ಎಂದು ಬರೆದುಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ವಿಪಂಜಿಕಾ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮಗಳು ನೋಡಲು ಸುಂದರವಾಗಿರುವುದನ್ನು ಸಹಿಸಿಕೊಳ್ಳಲು ಆಗದ ಪತಿ ಮಗಳ ತಲೆಯ ಕೂದಲನ್ನು ಬೋಳಿಸಿ ವಿಕೃತಿ ಮೆರೆದಿದ್ದಾನೆ. ತಾನು ಕಪ್ಪಾಗಿ ಇರುವುದರಿಂದ ನೀನು ಕೂಡ ಕೆಟ್ಟದಾಗಿ ಕಾಣಬೇಕು ಎಂಬ ಉದ್ದೇಶದಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಗಾಯಗಳನ್ನು ಮಾಡಿದ್ದ ದಿನಂಪ್ರತಿ ಮಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ದೂರಿದ್ದಾರೆ.
ಮದುವೆ ಸಂದರ್ಭ ಹೆಚ್ಚಿನ ವರದಕ್ಷಿಣೆ ನೀಡಲಾಗಿತ್ತು ಆದರೆ ಅದು ಸಾಕಾಗಿಲ್ಲ ಎಂದು ಮಗಳ ಬಳಿ ಪತಿ ಮನೆಯವರು ನಿರಂತರ ಕಿರುಕುಳ ನೀಡಿತ್ತಿದ್ದರು. ಅಲ್ಲದೆ ದೈಹಿಕ ಹಲ್ಲೆಯನ್ನೂ ಮಾಡುತ್ತಿದ್ದರು. ಈ ಎಲ್ಲ ವಿಚಾರವನ್ನು ಮಗಳು ನನ್ನ ಬಳಿ ಹೇಳಿಕೊಂಡಿದ್ದಳು. ಆದರೆ ಇಂದಲ್ಲಾ ನಾಳೆ ಸರಿ ಹೋಗಬಹುದು ಎಂದುಕೊಂಡಿದ್ದೆ. ಆದರೆ ಅದರ ನಡುವೆ ಈ ರೀತಿ ನಡೆದಿದೆ ಎಂದು ವಿಪಂಜಿಕಾ ತಾಯಿ ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ವಿಪಂಜಿಕಾ ಅವರ ಪತಿ ನಿಧೀಶ್ ಆತನ ಸಹೋದರಿ ನೀತು ಮತ್ತು ಅವರ ತಂದೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.