ಶಿವಮೊಗ್ಗ: ದೇವ ಭೂಮಿ ಹಿಮಾಲಯದ ಚಾರಣ ಒಂದು ಅನಿರ್ವಚನೀಯ ಅನುಭವ. ಅದೊಂದು ಅನುಭೂತಿ ಎಂದು ಯೂಥ್ ಹಾಸ್ಟೆಲ್ ತರುಣೋದಯ ಘಟಕದ ಗೌರವಾಧ್ಯಕ್ಷ ಎನ್. ಗೋಪಿನಾಥ್ ಬಣ್ಣಿಸಿದರು.
ಯುವಜನ ಚಾರಣ ಸಂಸ್ಥೆಯ ತರುಣೋದಯ ಘಟಕ ಆಯೋಜಿಸಿರುವ ಹಿಮಾಚಲ ಪ್ರದೇಶದ ರಮ್ಯ ತಾಣ, ರೋಲಿ ಕೋಲಿ, ಚಾರಣಕ್ಕೆ ತೆರಳುತ್ತಿರುವ ಚಾರಣಿಗರನ್ನು ಬೀಳ್ಕೊಟ್ಟು ಮಾತನಾಡಿದ ಅವರು, ಹಿಮಾಲಯವನ್ನು
ದರ್ಶಿಸುವ, ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ಅಪರೂಪದ ಅವಕಾಶ ಇದು. ಪ್ರಕೃತಿ ಅಧ್ಯಯನ ಚಾರಣದ ಆಶಯವಾಗಬೇಕು ಎಂದರು.
ಹಿಮಾಲಯ ಚಾರಣ ಸಾಹಸದ ಕೆಲಸ. ಅದರಲ್ಲಿ ತೊಡಗಿಸಿಕೊಳ್ಳಲು ಉತ್ಸಾಹಿ ಚಾರಣಿಗರಿಗೆ ಅವಕಾಶ ಮಾಡಿ ಕೊಡುತ್ತಿರುವ ಯೂತ್ ಹಾಸ್ಟೆಲ್ಸ್ ಕಾರ್ಯ ಅನುಕರಣೀಯ ಎಂದ ಅವರು, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ
ಚಾರಣಿಗ ಅ.ನಾ.ವಿಜಯೇಂದ್ರರವರು ಈ ನಿಟ್ಟಿನಲ್ಲಿ ಭಾರತದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಚಾರಣಕ್ಕೆ ಕಳುಹಿಸಿ, ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಅ.ನ. ವಿಜಯೇಂದ್ರ ಅವರು, ತಮ್ಮೆಲ್ಲರ ಅದೃಷ್ಟ, ಯುದ್ಧದ ಕಾರ್ಮೋಡ ಸರಿದು, ನಾವು ಹೋಗುವ ಸಮಯಕ್ಕೆ ಯಾವುದೆ ಅಡೆ ತಡೆ ಇಲ್ಲದೆ, ಅವಕಾಶ ದೊರಕಿದೆ. ಈ ಬಾರಿಯ ಚಾರಣದಲ್ಲಿ ಹೊಸಬರು ಬಹಳಷ್ಟು ಸದಸ್ಯರು ಇದ್ದಾರೆ. ಹಿರಿಯ ಹಾಗೂ ಅನುಭವಿ ಚಾರಣಿಗರು ಜೊತೆಗಿದ್ದಾರೆ. ಯಾವುದೇ ಅಂಜಿಕೆ ಬೇಡ. ಯಶಸ್ವಿಯಾಗಿ ಚಾರಣ ಪೂರೈಸಿ ಬರುತ್ತೀರಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಚಾರಣದಲ್ಲಿ ನಾವು ಸಂತೋಷ ಪಡುವುದರೊಂದಿಗೆ ಇತರರೂ ಖುಷಿ ಪಡಲು ಅವಕಾಶ ಮಾಡಿ ಕೊಡಬೇಕು ಎಂದ ಅವರು, ಚಾರಣ ಒಂದು ನಡಿಗೆ ಸ್ಪರ್ಧೆ ಅಲ್ಲ, ಅದು ನಿಧಾನವಾಗಿ ಸಾಗುವ ಪ್ರಕೃತಿ ಅಧ್ಯಯನ ಎಂದರು.
ಸಂಸ್ಥೆಯ ಜಿಲ್ಲಾ ಛೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾರಣಿಗರನ್ನು ಕಲಿಸಿಕೊಡುವ ನಿಟ್ಟಿನಲ್ಲಿ ತರುಣೋದಯ ಘಟಕ ಮುಂಚೋಣಿಯಲ್ಲಿದೆ. ಉತ್ಸಾಹಿಗಳು ಸಂಸ್ಥೆಯ ಆಜೀವ ಸದಸ್ಯತ್ವ ಪಡೆದು, ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಗಳಲ್ಲಿ ಭಾಗವಹಿಸುತ್ತಿರುವುದರಿಂದ, ಇಂದು ಭಾರತದಲ್ಲಿಯೇ ಶಿವಮೊಗ್ಗ ಘಟಕ ಅತೀ ಹೆಚ್ಚು ಸದಸ್ಯರನ್ನು ಹಿಮಾಲಯ ಚಾರಣಕ್ಕೆ ಕಳುಹಿಸಿರುವ ದಾಖಲೆ ಮಾಡಿದೆ ಎಂದರು.
ರಾಜ್ಯ ಮಾಜಿ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಪ್ರಕೃತಿಯನ್ನು ಆಸ್ವಾದಿಸಲು ಅದೃಷ್ಟ ಬೇಕು. ಯಾವುದೇ ವಾಹನ ಹೋಗಲಾರದ ಸ್ಥಳಕ್ಕೆ ಚಾರಣಿಗ ಸುಲಭವಾಗಿ ಹೋಗಿ ತಲುಪುತ್ತಾನೆ. ಹಿಮಾಲಯದ ಪ್ರಕೃತಿ ಸವಿ, ಸವಿದವನೆ ಬಲ್ಲ, ಅಂತಹ ಅವಕಾಶವನ್ನು ನಮ್ಮ ತರುಣೋದಯ ಘಟಕ ಹಲವಾರು ವರ್ಷದಿಂದ ಚಾರಣಿಗರಿಗೆ ಉಣಬಿಡಿಸುತ್ತಿದೆ ಎಂದರು.
ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ರವೀಂದ್ರ ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು, ತಂಡದ ನಾಯಕರಾದ ರವೀಂದ್ರ, ರಮೇಶ್ ಸೇರಿದಂತೆ ಮಲ್ಲಿಕಾರ್ಜುನ ಕಾನೂರು, ದಿಲೀಪ್ ನಾಡಿಗ್, ರಾಜು, ಮಂಜುನಾಥ್ ಮೊದಲಾದವರು ಇದ್ದರು.