ಶಿವಮೊಗ್ಗ: ಶಿಕ್ಷಕನಾದವನು ಪ್ರತಿನಿತ್ಯ ವಿದ್ಯಾರ್ಥಿಯಾಗಿದ್ದಾಗ ಮಾತ್ರ ಪರಿಪಕ್ವತೆಯನ್ನು ಪಡೆಯುತ್ತಾನೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ, ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಬಿಜಿಎಸ್ ಸಭಾ ಭವನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ
ಮೂರು ದಿನಗಳ ಕಾರ್ಯಾಗಾರದ ಸಾನಿಧ್ಯ ವಹಿಸಿ ಮಾತನಾಡಿದರು. ವಿದ್ಯೆ ಕಲಿಯುವಾಗಲು ಬಾಗಬೇಕು, ನೀಡುವಾಗಲೂ ಬಾಗಬೇಕು ಆಗ ಮಾತ್ರ ವಿನಯದಿಂದ ವಿದ್ಯೆ ಒಲಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ನಾನು ಶಿಕ್ಷಕನಾಗಿದ್ದೇನೆ ಕಲಿಯುವುದು ಏನೂ ಇಲ್ಲ ಎಂದು ಕೊಂಡರೆ ಆ ಶಿಕ್ಷಕ ಪರಿಪೂರ್ಣ ಶಿಕ್ಷಕನಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಜೊತೆ ಇರುವಾಗ ಶಿಕ್ಷಕನಾಗಿ, ಉಳಿದ ಅವಧಿಯಲ್ಲಿ ವಿದ್ಯಾರ್ಥಿಯಾಗಿ ವಿಷಯಗಳ ಗ್ರಹಿಕೆಯನ್ನು ಮಾಡುತ್ತಾ ಇದ್ದರೆ ಮಾತ್ರ ಉತ್ತಮ ಶಿಕ್ಷಕನಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಪ್ರತಿವರ್ಷ ಬೇಸಿಗೆಯ ಸಮಯದಲ್ಲಿ ಈ ಕಾರ್ಯಾಗಾರ ನಡೆಯುತ್ತದೆ. ಈ ಅವಧಿಯಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳು ಲಭ್ಯವಿರುತ್ತದೆ. ಮಾವು ಮತ್ತು ಹಲಸು ಮಾಗಿದಷ್ಟು ಹೆಚ್ಚು ರುಚಿಯಾಗಿರುತ್ತದೆ ಮತ್ತು ರಸಭರಿತವಾಗುತ್ತದೆ. ಅದೇ ರೀತಿ ಶಿಕ್ಷಕನಾದವನೂ ಸಹ ತನ್ನ ಕ್ಷೇತ್ರದಲ್ಲಿ ಮಾಗಬೇಕೆಂದು ಸೂಚ್ಯವಾಗಿ ಹೇಳಿದರು.
ಮಕ್ಕಳಿಗೆ ತರಬೇತಿ, ನಿರಂತರ ಅಭ್ಯಾಸ ಮಾಡುವುದರ ಮೂಲಕ ಅವರ ಸಾಧನೆಗೆ ಶಕ್ತಿ ತುಂಬುವುದು, ಮಕ್ಕಳಲ್ಲಿ ಅನೇಕ ನೂನ್ಯತೆ ಗಳಿರುತ್ತವೆ, ಅವುಗಳನ್ನು ತಿದ್ದಿ-ತೀಡಿ ಉತ್ತಮ ರೀತಿಯಲ್ಲಿ ಒಬ್ಬ ಪ್ರಜ್ಞಾವಂತರನ್ನಾಗಿ ಸಜ್ಜುಗೊಳಿಸುವುದರಲ್ಲಿ ತಮ್ಮಗಳ ಪಾತ್ರ ದೊಡ್ಡದು ಎಂದರು.
ಈ ಕಾರ್ಯಗಾರದಲ್ಲಿ ಸಂಸ್ಥೆಯ ವಿವಿಧ ಶಾಲೆಗಳ ಸುಮಾರು 150ಕ್ಕೂ ಹೆಚ್ಚು ವಿವಿಧ ವಿಷಯಗಳ ಶಿಕ್ಷಕರು, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯುತ್ತಿರುವುದು ಮತ್ತೊಂದು ವಿಶೇಷ.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಯಟ್ ಉಪನ್ಯಾಸಕ ಶಿವಕುಮಾರ್, ಮಾನಸ ಟ್ರಸ್ಟ್ ಸಲಹೆಗಾರರ ತಂಡದಿಂದ ಕಲಿಕೆಯಲ್ಲಿ ಅಸಮರ್ಥತೆ, ವರ್ತನೆ ಅಸ್ವಸ್ಥತೆಗಳು ಕುರಿತು. ಸ್ತ್ರೀರೋಗ ತಜ್ಞರಾದ ಡಾ. ಸ್ವಾತಿ ಕಿಶೋರ್, ಇಂಗ್ಲಿಷ್ ಶಿಕ್ಷಕರಾದ ದಿವಾಕರ್ ಎಂ., ಮನೋಶಾಸ್ತ್ರಜ್ಞರಾದ ಡಾ. ಐಶ್ವರ್ಯ ಅರವಿಂದ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎ. ಎನ್. ರಾಮಚಂದ್ರ, ಮನೋ ಶಾಸ್ತ್ರಜ್ಞರಾದ ಡಾ. ಅರವಿಂದ್, ಚನ್ನಬಸಯ್ಯ ಚಿಕ್ ಮಠ್,ಸಂಸ್ಥೆಯ ನಿರ್ದೇಶಕರುಗಳಾದ ಹಿರಿಯಣ್ಣ ಹೆಗಡೆ, ಕೊಳಿಗೆ ವಾಸಪ್ಪ ಗೌಡ,ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್., ಬಿಜಿಎಸ್ ವಸತಿ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್,ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲರಾದ ದಿವ್ಯ ಕರಣಂ,ಶ್ರೀ ಮತಿ ವೀಣಾ, ಶ್ರೀಮತಿ ಸುಜಾತಾ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.