ಬಜ್ಪೆ: ಗುರುಪುರ ಮೂಳೂರು ಮಠದಬೈಲು ಎಂಬಲ್ಲಿ ಎರಡು ಮನೆ ಹಾಗೂ ದೈವಸ್ಥಾನಗಳಿಗೆ ಕಳ್ಳರು ನುಗ್ಗಿ ನಗ ನಗದು ಕಳವುಗೈದು ಪರಾರಿಯಾಗಿದ್ದಾರೆ.
ಎ.6ರಂದು ರಾತ್ರಿ ಗಣೇಶ್ ಕೊಟ್ಟಾರಿ ಎಂಬವರ ಮನೆಯ ಅಂಗಳದಲ್ಲಿರುವ ದೈವಸ್ಥಾನದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ದೈವದ ಕುತ್ತಿಗೆಯಲ್ಲಿದ್ದ 3 ಚಿನ್ನದ ಕರಿಮಣಿ ಸರಗಳು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ.
ಕಳವಾದ ಚಿನ್ನದ ಕರಿಮಣಿ ಸರಗಳು ಇವುಗಳ ಅಂದಾಜು ಮೌಲ್ಯ ಸುಮಾರು 75000 ರೂ. ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 2000 ರೂ. ಹಣವನ್ನು ಕಳ್ಳರು ಕಳವು ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಗಣೇಶ್ ಕೊಟ್ಟಾರಿ ನೆರೆ ಮನೆಯ ಶೋಧನ್ ರಾವ್ ಮನೆಯ ಅಂಗಳದ ದೈವಸ್ಥಾನದ ಬಾಗಿಲನ್ನು ಮುರಿದಿದ್ದಾರೆ. ಸ್ವಲ್ಪ ದೂರದಲ್ಲಿರುವ ರಾಧ ಎಂಬವರ ಮನೆಯ ಬೀಗ ಮುರಿದು ಅಲ್ಮೇರಾಗಳನ್ನು ಮುರಿದು ಹಾಕಲಾಗಿದೆ. ಗುಲಾಬಿ ಎಂಬವರ ಮನೆಯ ಬಾಗಿಲುಗಳನ್ನು ಮತ್ತು ಅಲ್ಮೇರಾಗಳನ್ನು ಮುರಿದು ಅವರ ಮನೆಯಲ್ಲಿದ್ದ ದೇವರ ಬೆಳ್ಳಿಯ ಸುಮಾರು 30000 ರೂ. ಮೌಲ್ಯದ ಬೆಳ್ಳಿ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.